ಯಕ್ಷಗಾನದ ಮೂಲಕ ಜೀವನ ಮೌಲ್ಯ ಅರಿವು: ಎಂ.ಎಸ್. ಮಹಾಬಲೇಶ್ವರ ಭಟ್
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಮ೦ಗಳವಾರ, ಜುಲೈ 7 , 2015
|
ಜುಲೈ 07, 2015
|
ಯಕ್ಷಗಾನದ ಮೂಲಕ ಜೀವನ ಮೌಲ್ಯ ಅರಿವು: ಎಂ.ಎಸ್. ಮಹಾಬಲೇಶ್ವರ ಭಟ್
ಮೂಡಬಿದಿರೆ :
ವಿಷಯದ ಚೌಕಟ್ಟಿನಲ್ಲಿ ಮಂಥನ, ಚಿಂತನದೊಂದಿಗೆ ಜೀವನ ಮೌಲ್ಯಗಳ ಅರಿವು, ಪ್ರತಿಪಾದನೆ ನಡೆಯುವುದು ಯಕ್ಷಗಾನದ ಹಿರಿಮೆ. ಯಕ್ಷಗಾನ ನಮ್ಮ ಜೀವನದ ದಾರಿದೀಪ ಎಂದು ಕರ್ಣಾಟಕ ಬ್ಯಾಂಕ್ ಮುಖ್ಯ ಮಹಾಪ್ರಬಂಧಕ ಎಂ.ಎಸ್. ಮಹಾಬಲೇಶ್ವರ ಭಟ್ ಹೇಳಿದರು.
ಪದ್ಮಾವತಿ ಕಲಾಮಂದಿರದಲ್ಲಿ ಐದು ದಿನಗಳ ಕಾಲ ನಡೆದ, ಬೆಳುವಾಯಿಯ ಶ್ರೀ ಯಕ್ಷದೇವ ಮಿತ್ರಕಲಾಮಂಡಳಿಯ ಹದಿನೆಂಟನೇ ವರ್ಷದ "ಯಕ್ಷಾಯನ-2015'ರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯಕ್ಷದೇವ ಪ್ರಶಸ್ತಿ ಪ್ರದಾನ
ಹಿರಿಯ ಯಕ್ಷಗಾನ ಕಲಾವಿದರಾದ ಕುರಿಯ ಗಣಪತಿ ಶಾಸ್ತ್ರಿ ಮತ್ತು ಗಂಗಯ್ಯ ಶೆಟ್ಟಿ ಗೇರುಕಟ್ಟೆ ಇವರನ್ನು "ಯಕ್ಷದೇವ ಪ್ರಶಸ್ತಿ' ನೀಡಿ ಸಮ್ಮಾನಿಸಲಾಯಿತು.
ಕಲಾಸಂಘಟಕ ಸುಧಾಕರ ರಾವ್ ಪೇಜಾವರ ಅಭಿನಂದನ ಭಾಷಣ ಮಾಡಿದರು.
ಇದು ತಮ್ಮ ಕುರಿಯ ಮನೆತನ, ಭಾಗವತನನ್ನಾಗಿ ಮೇಳಕ್ಕೆ ಆಹ್ವಾನಿಸಿದ ಕಲ್ಲಾಡಿ ವಿಠಲ ಶೆಟ್ಟಿ ಹಾಗೂ ಮಾರ್ಗದರ್ಶನವಿತ್ತ ನಿಡ್ಲೆ ನರಸಿಂಹ ಭಟ್ಟರಿಗೆ ಸಂದ ಗೌರವ ಎಂದು ಗಣಪತಿ ಶಾಸ್ತ್ರಿ ಹೇಳಿದರು.
ಮುಖ್ಯ ಅತಿಥಿಗಳಾಗಿ ಚಿತ್ರಾಪು ದಿ| ರಾಜಮ್ಮ ವಾಸುದೇವ ರಾವ್ ಟ್ರಸ್ಟ್ನ ಅಧ್ಯಕ್ಷ ಗಣೇಶ್ ರಾವ್ ಕುಂಭಾಶಿ, ಬೆಂಗಳೂರಿನ ಉದಯಮಿ ಎನ್.ವಿ. ಜಿ.ಕೆ. ಭಟ್, ಮೂಡಬಿದಿರೆಯ ಬಸದಿಗಳ ಮೊಕ್ತೇಸರ ಬಿ. ದಿನೇಶ್ಕುಮಾರ್ ಆನಡ್ಕ, ಜೋತಿಷಿ ವಾಸುದೇವ ಹೆಬ್ಟಾರ್ ಮಂಜರಪಲ್ಕೆ, ಉಡುಪಿ ಭಾರತ್ ಬಿಲ್ಡರ್ನ ಪ್ರಫುಲ್ಲಚಂದ್ರ ರಾವ್ ಭಾಗವಹಿಸಿ ಶುಭ ಹಾರೈಸಿದರು.
ಕಲಾವಿಮರ್ಶಕ ಶ್ರೀಧರ ಡಿ.ಎಸ್. ಕಿನ್ನಿಗೋಳಿ ಸಮಾರೋಪ ಭಾಷಣ ಮಾಡಿದರು. ಇತರೆಲ್ಲ ಪ್ರಯೋಗಗಳ ಸಾಧಕಬಾಧಕಗಳ ಬಗ್ಗೆ ಚಿಂತಿಸುವ ಜತೆಗೆ ತುಳುವಿನ ಮೂಲ ಸೊಗಸು, ಸೌಂದರ್ಯ, ಶ್ರೀಮಂತಿಕೆಯನ್ನು ಯಕ್ಷಗಾನದ ಮೂಲಕ ಪರಿಣಾಮಕಾರಿಯಾಗಿ ಹೊರಹೊಮ್ಮಿಸಲು ಕಲಾವಿದರು ಪ್ರಯತ್ನಿಸಬೇಕಾಗಿದೆ ಎಂದು ಅವರು ಹೇಳಿದರು.
ಯಕ್ಷಗಾನ ವೇಷಗಳ ಪ್ರತಿಕೃತಿ ನಿರ್ಮಾತೃ, ಕಲಾ ಸಾಧಕ ದಿ| ಅಡೂರು ಶ್ರೀಧರ ರಾವ್ ಅವರ ನೆನಪಿಗೆ "ಯಕ್ಷಾಯನ-2015'ರ ಸಮಾರೋಪ ಸಮಾರಂಭವನ್ನು ಸಮರ್ಪಿಸುವುದಾಗಿ ಕಾರ್ಯಾಧ್ಯಕ್ಷ ದೇವಾನಂದ ಭಟ್ ಉದ್ಘೋಷಿಸಿದರು.
ಮಂಡಳಿ ಗೌರವಾಧ್ಯಕ್ಷ ಕೆ. ಶ್ರೀಪತಿ ಭಟ್ ಸ್ವಾಗತಿಸಿದರು. ಎಸ್. ದಯಾನಂದ ರಾವ್ ಶಂಕರನಾರಾಯಣ ನಿರೂಪಿಸಿದರು. ಸಹಕಾರಿಗಳನ್ನು ಪುರಸ್ಕರಿಸಲಾಯಿತು. ಉಪಾಧ್ಯಕ್ಷ ಮಹಾವೀರ ಪಾಂಡಿ, ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ, ರಮೇಶ ಶೆಟ್ಟಿಗಾರ್ ಉಪಸ್ಥಿತರಿದ್ದರು. ಕಾರ್ಯಾಧ್ಯಕ್ಷ ದೇವಾನಂದ ಭಟ್ ವಂದಿಸಿದರು.
ಅಗರಿಯವರ ಜಾಗಟೆ ಪೆಟ್ಟು, ಕುರಿಯ ಶಾಸ್ತ್ರಿಯವರ "ಹೂ೦, ಹೂ೦' ರಂಗದಲ್ಲಿ ಕಲಾವಿದನನ್ನು ಹೇಗೆ ದುಡಿಸಬೇಕು, ದುಡಿಸಬಹುದು, ಒಮ್ಮೊಮ್ಮೆ ಏಕೆ ಕುಣಿಸಬಾರದು ಎಂಬ ಸಾಂದರ್ಭಿಕ ಪ್ರಜ್ಞೆಗೆ ಕುರಿಯ ಗಣಪತಿ ಶಾಸ್ತ್ರಿ ಅವರಂಥ ಭಾಗವತರು ಸಾಕ್ಷಿ. ಕಲಾವಿದ ತಪ್ಪು ಮಾಡಿದರೆ ಅಗರಿ ಭಾಗವತರು ಜಾಗಟೆಯಲ್ಲೇ ಪೆಟ್ಟು ಕೊಟ್ಟು ಎಚ್ಚರಿಸುತ್ತಿದ್ದವರಾದರೆ ಶಾಸ್ತ್ರಿ ಅವರು ಕುಳಿತಲ್ಲೇ "ಹೂ೦, ಹೂ೦' ಎಂದು ಎಚ್ಚರಿಸುವವರು. - ಗೇರುಕಟ್ಟೆ ಗಂಗಯ್ಯ ಶೆಟ್ಟಿ
ಕೃಪೆ :
udayavani
|
|
|